ದಾಂಡೇಲಿ: ಅನಮೋಡ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ವಾಹನ ತಪಾಸಣೆ ವೇಳೆ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಮುಂಜಾನೆ ಸುಮಾರು 1.30ರ ವೇಳೆಗೆ ಅನಮೋಡ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, KA-25/EV-4199 ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಯಿತು. ಈ ವೇಳೆ ವಾಹನದಲ್ಲಿದ್ದ ಎರಡು ಏರ್ ಬ್ಯಾಗ್ಗಳಲ್ಲಿ 28.25 ಲೀಟರ್ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ನಮೂನೆಯ ಮದ್ಯದ ಬಾಟಲಿಗಳು ಪತ್ತೆಯಾದವು.
ಈ ಸಂಬಂಧ ನವೀನ್ ಚೆನ್ನಯ್ಯ ದಾರ (ವಿನೋಬನಗರ, ಗದಗ ರಸ್ತೆ, ಹುಬ್ಬಳ್ಳಿ) ಎಂಬಾತನನ್ನು ಬಂಧಿಸಲಾಗಿದ್ದು, ಆತ ಗೋವಾ ರಾಜ್ಯದಿಂದ ತನ್ನ ಮನೆಗೆ ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ. ಆರೋಪಿಯಿಂದ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜಪ್ತಿ ಮಾಡಲಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ ₹60 ಸಾವಿರ ಹಾಗೂ ಮದ್ಯದ ಮೌಲ್ಯ ಸುಮಾರು ₹16,500 ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗದ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ, ಕಾರವಾರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಪ್ರಕರಣ ಪತ್ತೆ ಹಚ್ಚುವಿಕೆಯಲ್ಲಿ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ್, ಮುಖ್ಯ ಪೇದೆಗಳಾದ ಸಂತೋಷ್ ಸುಬ್ಬಣ್ಣವರ್, ಅಲಿ ಸಾಬ್ ಅವರಾದಿ, ಪೇದೆ ಗಜಾನನ ನಾಯ್ಕ್ ಭಾಗವಹಿಸಿದ್ದರು. ಪ್ರಕರಣವನ್ನು ದಾಂಡೇಲಿ ವಲಯದ ಅಬಕಾರಿ ಉಪನಿರೀಕ್ಷಕ ಕರೆಪ್ಪ ಹೊಳೆನವರ್ ದಾಖಲಿಸಿಕೊಂಡಿದ್ದಾರೆ.









